ಮಾನವನು ಎಷ್ಟೇ ದೊಡ್ಡವನಾಗಿದ್ದರೂ,
ಎಷ್ಟೇ ಸಂಪತ್ತನ್ನು ಗಳಿಸಿದ್ದರೂ, ಎಷ್ಟೇ ಅಧಿಕಾರವನ್ನು ಹೊಂದಿದ್ದರೂ ಒಂದು ದಿನ ಈ ಲೋಕವನ್ನು ಬಿಟ್ಟು ಹೋಗಲೇಬೇಕು. ಇದೇ ಜೀವನದ ಅಚಲ ಸತ್ಯ. ನಾವು ಈ ಭೂಮಿಗೆ ಖಾಲಿ ಕೈಯಲ್ಲಿ ಬರುತ್ತೇವೆ, ಖಾಲಿ ಕೈಯಲ್ಲೇ ಹೋಗುತ್ತೇವೆ. ನಮ್ಮೊಂದಿಗೆ ನಮ್ಮ ಒಳ್ಳೆಯ ಕಾರ್ಯಗಳು , ಮಾಡಿದ ಸತ್ಕರ್ಮಗಳು ಬೇರೆಯವರಿಗೆ ನೀಡಿದ ದಾನ ಧರ್ಮ ,ಮಾಡಿದ ಉಪವಾಸ, ಹೊರತು ಹಣ, ಹೆಸರು ಐಷಾರಾಮಿ ಮನೆ ದುಬಾರಿ ಕಾರು ನಿನ್ನ ಸಂಪತ್ತು , ಕೊನೆಗೆ ನೀನು ಹಾಕಿಕೊಂಡ ಉಡುಪು ಕೂಡ ನಿನ್ನೊಂದಿಗೆ ಬರುವುದಿಲ್ಲ..ಇಷ್ಟು ತಿಳಿದಿದ್ದರೆ ಇಂದು ಯಾರೂ ಕೂಡ " ಮರಣ" ವನ್ನು ದ್ವೇಷಿಸುತ್ತಿರಲಿಲ್ಲ..
ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರೂ ಹಣ, ಆಸ್ತಿ, ಅಧಿಕಾರ, ಹೆಸರಿನ ಹಿಂದೆ ಓಡುತ್ತಿದ್ದಾರೆ. ಉತ್ತಮ ಜೀವನವನ್ನು ಕಟ್ಟಿಕೊಳ್ಳುವುದು ತಪ್ಪಲ್ಲ. ಆದರೆ ಈ ಎಲ್ಲದರ ಮಧ್ಯೆ ಈ ಲೋಕ ಶಾಶ್ವತವಲ್ಲ ಎಂಬ ದೊಡ್ಡ ಸತ್ಯವನ್ನು ನಾವು ಕೆಲವೊಮ್ಮೆ ಮರೆತುಬಿಡುತ್ತೇವೆ .
ಆದರೆ ಜೀವನದ ಕೊನೆಯ ಕ್ಷಣದಲ್ಲಿ ಅವನಿಗೆ ಅರಿವಾಗುವುದು ಒಂದೇ ವಿಷಯ—ಇಷ್ಟು ವರ್ಷಗಳ ಓಟದ ಅಂತ್ಯ ಇಷ್ಟೇ ಎಂದು.
ನಾವು ಪ್ರತಿ ದಿನ ನೋಡುತ್ತೇವೆ. ಹೂವು ಅರಳುತ್ತದೆ, ಕೆಲವೇ ದಿನಗಳಲ್ಲಿ ಒಣಗುತ್ತದೆ. ದೊಡ್ಡ ದೊಡ್ಡ ಮರಗಳೂ ಒಂದು ದಿನ ನೆಲಕ್ಕುರುಳುತ್ತವೆ. ಕೆಲವೊಮ್ಮೆ ಪ್ರಕೃತಿಯ ವಿಕೋಪಕ್ಕೆ ಇಡೀ ಊರಿಗೆ ಊರೇ ನಾಶವಾಗುತ್ತದೆ. ಈ ಸುತ್ತಲಿನ ಪ್ರಕೃತಿಯೇ ನಮಗೆ ಪ್ರತಿದಿನ ಒಂದು ಪಾಠ ಹೇಳುತ್ತದೆ—ಈ ಲೋಕದಲ್ಲಿ ಶಾಶ್ವತವಾದದ್ದು ಯಾವುದೂ ಇಲ್ಲ.
ನಮ್ಮ ಜೀವನವು ಒಂದು ಪ್ರಯಾಣದಂತೆ.. ಈ ಭೂಮಿಗೆ ಬಂದ ದಿನದಿಂದಲೇ ನಮ್ಮ ಪ್ರಯಾಣ ಆರಂಭವಾಗುತ್ತದೆ. ಹಾಗೆಯೇ ಒಂದು ದಿನ ಈ ಪ್ರಯಾಣ ಮುಗಿಯುತ್ತದೆ. ಆ ದಿನ ಯಾವಾಗ ಬರುತ್ತದೆ ಯಾವ ಕ್ಷಣಕ್ಕೆ ಈ ಲೋಕವನ್ನು ನಾವು ತ್ಯಜಿಸಬೇಕೆಂಬುದು ಯಾರಿಗೂ ತಿಳಿದಿಲ್ಲ. ಆದ್ದರಿಂದ ಪ್ರತಿಯೊಂದು ಕ್ಷಣವೂ ನಮಗೆ ಅಮೂಲ್ಯವಾದದ್ದು...
ಈ ಬದುಕಿನ ನಿಜವಾದ ಉದ್ದೇಶ ಪ್ರತಿಯೊಂದು ದಿನವನ್ನೂ ಅರ್ಥಪೂರ್ಣವಾಗಿ ಬದುಕುವುದು. ಕುಟುಂಬದೊಂದಿಗೆ ಸಮಯ ಕಳೆಯುವುದು. ಅಗತ್ಯವಿರುವವರಿಗೆ ಸಹಾಯ ಮಾಡುವುದು. ಯಾರಿಗೂ ಅನ್ಯಾಯ ಮಾಡದಿರುವುದು. ಕ್ಷಣಿಕ ಕೋಪಕ್ಕಾಗಿ ಶಾಶ್ವತ ಸಂಬಂಧಗಳನ್ನು ಕಳೆದುಕೊಳ್ಳದಿರುವುದು. ಏಕೆಂದರೆ ಜೀವನ ಯಾವಾಗ ಅಂತ್ಯಗೊಳ್ಳುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ.
ಸಾವು ಎಲ್ಲರಿಗೂ ಸಮಾನ. ಅದು ಶ್ರೀಮಂತರನ್ನೂ ಬಡವರನ್ನೂ, ಯಾರನ್ನು ಬಿಡುವುದಿಲ್ಲ. ಈ ಸತ್ಯವನ್ನು ಅರಿತವನು ಅಹಂಕಾರವನ್ನು ಬಿಟ್ಟು ವಿನಮ್ರನಾಗುತ್ತಾನೆ. ದ್ವೇಷವನ್ನು ಬಿಟ್ಟು ಪ್ರೀತಿಯಿಂದ ನಡೆದುಕೊಳ್ಳುತ್ತಾನೆ
ಸದಾ ಸತ್ಕಾರ್ಯಗಳನ್ನು ಮಾಡುತ್ತಾನೆ ದಾನ ಧರ್ಮಗಳನ್ನು ಕೊಡುತ್ತಾನೆ. ಕುಟುಂಬದೊಂದಿಗೆ ಸಮಯ ಕಳೆಯುತ್ತಾನೆ. ಅಗತ್ಯವಿರುವವರಿಗೆ ಸಹಾಯ ಮಾಡುತ್ತಾನೆ. ಆತನು ಯಾರಿಗೂ ಅನ್ಯಾಯ ಮಾಡುವುದಿಲ್ಲ. ಕೋಪಕ್ಕಾಗಿ ಶಾಶ್ವತ ಸಂಬಂಧಗಳನ್ನು ಕಳೆದುಕೊಳ್ಳುವುದಿಲ್ಲ.
ಮಾಡಿದ ಎಲ್ಲಾ ಕಾರ್ಯವು ಒಳ್ಳೆಯ ಕೆಲಸಗಳಾಗಿರುತ್ತದೆ.
ಮನುಷ್ಯನ ಬದುಕು ನಿಜವಾಗಿಯೂ ಮೂರು ದಿನದ ಆಟದಂತೆಯೇ. ಮೊದಲ ದಿನ ಹುಟ್ಟು, ಎರಡನೇ ದಿನ ಬದುಕು, ಮೂರನೇ ದಿನ ಅಂತ್ಯ. ಈ ಮೂರು ದಿನಗಳ ನಡುವಿನ ಸಮಯವನ್ನು ಹೇಗೆ ಬಳಸುತ್ತೇವೆ ಎಂಬುದೇ ನಮ್ಮ ಜೀವನದ ನಿಜವಾದ ಅರ್ಥ.
contact us:
Email:shahidsha11@gmail.com
Insta : Yachu_riya
f.b : Yasmeen Riyaz
Blog : yasmitalk
( http://yasmitalk.blogspot.com)
WhatsApp: Follow the Yachuriya channel on WhatsApp: https://whatsapp.com/channel/0029VbCy685CHDye2rvAbs3t

Comments
Post a Comment